ಗುರುಗಳ ಮೇಲೆ ಅಪಾರ ಶ್ರದ್ಧೆ ಇರುವ ಪ.ಪೂ. ಭಕ್ತರಾಜ ಮಹಾರಾಜ

ಗುರು ಶ್ರೀ ಅನಂತಾನಂದ ಸಾಯೀಶರು ತಮ್ಮ ಶಿಷ್ಯ ಭಕ್ತರಾಜನಿಗೆ ವಿವಿಧ ಪ್ರಸಂಗಗಳಿಂದ ಗುರುತತ್ತ್ವದ ಅನುಭೂತಿಯನ್ನು ನೀಡಿದ ಪರಿ

ಶ್ರೀ ಅನಂತಾನಂದ ಸಾಯೀಶ (ಮುಂದೆ) ಇವರೊಂದಿಗೆ ಶಿಷ್ಯ ದಿನು (ಭಕ್ತರಾಜ)
ಶ್ರೀ ಅನಂತಾನಂದ ಸಾಯೀಶ (ಮುಂದೆ) ಇವರೊಂದಿಗೆ ಶಿಷ್ಯ ದಿನು (ಭಕ್ತರಾಜ)

ಶ್ರೀ ಅನಂತಾನಂದ ಸಾಯೀಶ ಇವರು ‘ದಿನು ಪ್ರತಿದಿನ ಉಪವಾಸ ಮಾಡುತ್ತಾನೆ’, ಎಂದು ಹೇಳುವುದು ಮತ್ತು ಅದರ ಸತ್ಯತೆಯ ಅನುಭೂತಿ ದಿನಕರನಿಗೆ ಕೊಡುವುದು

ಒಂದು ಸಲ ಶ್ರೀ ಅನಂತಾನಂದ ಸಾಯೀಶರ ಹತ್ತಿರ ಓರ್ವ ಕರ್ಮಠ ಬ್ರಾಹ್ಮಣನು ಬಂದನು ಮತ್ತು ಅವರ ದರ್ಶನ ಪಡೆದು, “ನಾನು ಇಡೀ ಶ್ರಾವಣಮಾಸ ಉಪವಾಸ ಮಾಡುತ್ತೇನೆ” ಎಂದು ಹೇಳಿದನು. ಅದನ್ನು ಕೇಳಿ ಶ್ರೀ ಅನಂತಾನಂದ ಸಾಯೀಶರು ಅವರಿಗೆ, “ನಮ್ಮ ದಿನು ಯಾವಾಗಲೂ ಉಪವಾಸ ಮಾಡುತ್ತಾನೆ” ಎಂದು ಹೇಳಿದರು. ಇದನ್ನು ಕೇಳಿ ದಿನಕರನಿಗೆ, ‘ನಾನು ದಿನದಲ್ಲಿ ೪-೫ ಸಲ ಅವರ ಮುಂದೆಯೇ ತಿನ್ನುತ್ತೇನೆ. ಆದರೆ ಸದ್ಗುರುಗಳು ಇವನು ಉಪವಾಸ ಮಾಡುತ್ತಾನೆ ಎಂದು ಹೇಳುತ್ತಿದ್ದಾರಲ್ಲ!’ ಎಂಬ ವಿಚಾರ ಬಂತು. ಆದರೆ ದಿನಕರನ ಮನಸ್ಸಿನಲ್ಲಿ ಸದ್ಗುರುಗಳು ಏನೇ ಹೇಳಿದರೂ ಅದು ಯೋಗ್ಯವೇ ಆಗಿರುತ್ತದೆ ಎಂಬ ಪೂರ್ಣ ವಿಶ್ವಾಸವಿತ್ತು.

ಆ ದಿನ ಸಂಜೆ ದಿನಕರ ಲೋಧಿಪುರದಿಂದ ರಾಮಜಿಯವರ (ಪ.ಪೂ. ರಾಮಾನಂದ ಮಹಾರಾಜರ ಕಡೆಗೆ) ಮನೆಯತ್ತ ನಡೆಯುತ್ತಾ (ಆಗ ನಡೆಯುವುದು ಅಥವಾ ಸೈಕಲ್ ಮೇಲೆ ತಿರುಗಾಡುವುದು ಇರುತ್ತಿತ್ತು) ಹೋಗುತ್ತಿರುವಾಗ ಅವನಿಗೆ ಇಂದೂರಿನ ಅರಮನೆಯ ಚೌಕದ ಹತ್ತಿರ ಮುದ್ರಿತ ಕಾಗದದ ಒಂದು ಪುಟ ಕಾಣಿಸಿತು. ಅವನು ಅದನ್ನು ಎತ್ತಿಕೊಂಡ. ಅದು ಸಂತ ತುಕಾರಾಮರ ಕಥೆಯ ಪುಟವಾಗಿತ್ತು. ಅದರಲ್ಲಿ, ‘ನಾಮ ಘೇತಾ ಗ್ರಾಸೋಗ್ರಾಸಿ ತೊ ನರ ಜೇವುನೀ ಉಪವಾಸಿ | (ಒಂದೊಂದು ತುತ್ತಿನೊಂದಿಗೆ ನಾಮಜಪವನ್ನು ಮಾಡುತ್ತಾ ಊಟ ಮಾಡಿದರೂ ಅವನು ಉಪವಾಸವಿದ್ದ ಹಾಗೆ) ಎಂದು ಬರೆಯಲಾಗಿತ್ತು. ಇದನ್ನು ಓದಿದ ನಂತರ ದಿನಕರನಿಗೆ ಸದ್ಗುರುಗಳ ಶಬ್ದಗಳ ನೆನಪಾಯಿತು ಮತ್ತು ಅವನ ಮನಸ್ಸು ಶಾಂತವಾಗಿ ಅವನಿಗೆ ಸಮಾಧಾನವೆನಿಸಿತು.

ಟಿಪ್ಪಣಿ – ಶ್ರೀ ಅನಂತಾನಂದ ಸಾಯೀಶರು ಶಿಷ್ಯ ಭಕ್ತರಾಜನಿಗೆ ಭಕ್ತರಾಜ ಎಂದು ನಾಮಕರಣ ಮಾಡುವ ಮೊದಲಿನ ಹೆಸರು ‘ದಿನಕರ’ ಎಂದಾಗಿತ್ತು. ಅವರು ದಿನು ಎಂದು ಕರೆಯುತ್ತಿದ್ದರು.

ಶ್ರೀ ಭಕ್ತರಾಜ ಮಹಾರಾಜರಿಗೆ ಸದ್ಗುರುಗಳ ಸಹವಾಸ ಕೇವಲ 1 ವರ್ಷ 10 ತಿಂಗಳು ಮಾತ್ರ ಸಿಕ್ಕಿತು; ಆದರೆ ಈ ಕಾಲದಲ್ಲಿ ಅವರು ದಿನುವಿಗೆ ಪೂರ್ಣತ್ವವನ್ನು ನೀಡಿದರು. ಸದ್ಗುರುಗಳು, “ನಾನು ದಿನುವಿನ ಹೆಸರನ್ನು ಜಪಿಸುತ್ತೇನೆ (ಮೈ ದಿನುಕಿ ಮಾಲಾ ಜಪತಾ ಹುಂ) ನಾನು ಅವನಿಗೆ ಎಲ್ಲವನ್ನೂ ನೀಡಿದ್ದೇನೆ, (ಮೈನೆ ಉಸಕೊ ಸಬ್ ಕುಛ ದಿಯಾ) ಎಂದು ಹೇಳುತ್ತಿದ್ದರು.

ವ್ಯವಸಾಯ ಮಾಡುವಾಗಲೂ ಹರಿಚಿಂತನದಲ್ಲಿರುವ ಮತ್ತು ಅದರಿಂದ ಭಜನೆಗಳು ಹೊಳೆದು ಅವುಗಳನ್ನು ಬರೆಯುವ ಪ.ಪೂ. ಭಕ್ತರಾಜರು

ಶ್ರೀ ಭಕ್ತರಾಜ ಮಹಾರಾಜರು ತ್ರಿಶೂಲ ದಂತಮಂಜನ, ಮನೋಹರ ಚೂರ್ಣ, ಕೆಮ್ಮಿನ ಮಾತ್ರೆಗಳು, ನೇತ್ರಬಿಂದು, ಚಂದ್ರಬಿಂದು ಔಷಧಿಗಳನ್ನು ಮಾರಾಟ ಮಾಡಿ ಸಂಸಾರ ನಡೆಸುತ್ತಿದ್ದರು. ಆದರೆ ಇವೆಲ್ಲವನ್ನು ಮಾಡುತ್ತಿರುವಾಗ ಅವರ ಗಮನ ಹರಿಚಿಂತನೆ ಮತ್ತು ಭಜನೆ ಇವುಗಳಲ್ಲಿಯೇ ಇರುತ್ತಿತ್ತು. ಹೀಗೆ ಒಂದು ಬಾರಿ ಔಷಧಿಗಳನ್ನು ಮಾರಾಟ ಮಾಡಲು ಅವರು ಮಧ್ಯಪ್ರದೇಶದ ಧಾರ ಮತ್ತು ಮಾಂಡವಾಗೆ ಹೋದಾಗ ಮಾರ್ಗದಲ್ಲಿ ಅವರು ‘ದೇವಾ, ತುಝೆಚ ಮಿ ಲೇಕರು |’ (ಭಗವಂತಾ, ನಾನು ನಿನ್ನ ಕಂದ) ಮತ್ತು ‘ಕಸೆ ಆಳವು ಮಿ…’ (ಹೇಗೆ ಭಜಿಸಲಿ ನಾ…) ಈ ಭಜನೆಗಳನ್ನು ಬರೆದರು ಮತ್ತು ಹಿಂದಿರುಗಿ ಬಂದ ನಂತರ ಗುರುಗಳಿಗೆ ಹಾಡಿ ತೋರಿಸಿದರು.

ಒಂದು ಬಾರಿ ನಾನು ಅವರೊಂದಿಗೆ ಇಂದೂರಿನಿಂದ ಬಸ್ ಮೂಲಕ ಉಜ್ಜೈನಿಗೆ ಹೊರಟೆ. ದಾರಿಯಲ್ಲಿ ತ್ರಿಶೂಲ ದಂತಮಂಜನ ಮಾರಿ ಮುಂದೆ ಬಸ್‌ನಲ್ಲಿ ಹೊರಟೆವು. ಬಸ್‌ನಲ್ಲಿ ಕುಳಿತಾಗ ಸ್ವಲ್ಪ ಸಮಯದ ನಂತರ ಶ್ರೀ ಭಕ್ತರಾಜ ಮಹಾರಾಜರು, ‘ಕಾಗದ ಮತ್ತು ಪೆನ್ ಕೊಡು’ ಎಂದು ಹೇಳಿದರು. ಅವರು ನನ್ನೆದುರು ‘ತ್ರೈಲೋಕ್ಯಾಚೆ ಯೋಗಿರಾಜ ಹೇ, ಅವತರಲೇ ಭೂವರಿ’ (ತ್ರೈಲೋಕ್ಯದ ಯೋಗಿರಾಜ, ಅವತರಿಸಿದರು ಭೂಲೋಕದ ಮೇಲೆ) ಭಜನೆಯನ್ನು ಚಿತ್ತುಕಾಟು ಮಾಡದೇ ಬರೆದರು. ಅವರು ಭಜನೆಯನ್ನು ಬರೆದಾದ ನಂತರ ನಾನು ಅವರಿಗೆ, ಈ ಭಜನೆ ನಿಮಗೆ ಹೇಗೆ ಹೊಳೆಯಿತು ಎಂದು ಕೇಳಿದೆ. ಆಗ ಅವರು, “ನನಗೆ ಈ ಶಬ್ದಗಳು ಮೇಲಿಂದ ಬರುತ್ತಿರುವುದು ಕಾಣಿಸುತ್ತಿತ್ತು. ಅದನ್ನೇ ನಾನು ಬರೆದೆ” ಎಂದರು.

– ಶ್ರೀ. ವಸಂತ (ಅಣ್ಣಾ) ಧಾಡಕರ (ಪ.ಪೂ. ಭಕ್ತರಾಜ ಮಹಾರಾಜರ ಭಕ್ತ), ಇಂದೂರ, ಮಧ್ಯಪ್ರದೇಶ.

(ಆಧಾರ : ಭಕ್ತರಾಜ ಗಾರುಡಿ ಆಲಾ)

Leave a Comment